ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಪ್ರಮೀಳಾಮಂಜು ಉರಾಳ' ಅವರ ಕವನ..
ಈ ಪರ್ಪಂಚಾನೇ ದ್ಯಾವ್ರು ಕಣೋ
ನಿನ್ ಹೆತ್ತವ್ವನ ಮಡಿಲಂಗೆ
ಹುಟ್ಟಿದ್ ಜೀವಾಕೆ ಜಾಗ ಕೊಟ್ಟು
ಉಸ್ರು ಹೋದ ಮ್ಯಾಕೆ ಮಣ್ಣಾಗೆ
ಸೇರ್ಸ್ಕೊಳ್ಳೋ ಭೂಮ್ತಾಯಿ ಅವ್ಳೆ ಕಣೋ
ಲಂಚ ಕೀಳೋ ಸಣ್ಣವ್ರೆಲ್ಲಾ
ಆಸೆ ಅನ್ನೋ ದೆವ್ವ ಮೆಟ್ಕಂಡು
ದೊಡ್ಮನಸ್ರಾಗವ್ರಲ್ಲಾ
ಕಾಲನಾ ಬೈಯ್ಯೋದ್ಯಾಕೆ
ಕೆಟ್ಟಿರೋದು ಜನ್ಗಳ ಮನ್ಸು ಕಣ್ಲಾ
ಸುಮ್ಕೆ ಕುಂತಿರೋ ಕಲ್ಬಂಡೆಗೆ
ಹಾಲ್ಯಾಕೋ ಸುರಿತಾರಲ್ಲ
ಉಸ್ರಾಡೋ ಜೀವದ್ ಬಾಯ್ಗೆ
ವಿಷ ಉಣ್ಸಿ ಕೊಲ್ತಾರಲ್ಲಾ
ಬದುಕಲ್ಲಿ ನ್ಯಾಯ ನೀತಿ
ನೇಣಾಕ್ಕೊಂಡು ಸತ್ತೋಗೈತೆ
ಇದ್ನ ನೋಡಿ ಲೋಕಾನೇ
ಬಾಯ್ ಬಾಯ್ ಬಡ್ಕೊಂಡು
ಚೀರಾಡತೈತೆ
ಬಡ್ವರ ಹೊಟ್ಟೆಗ್ ಹೊಡ್ದು
ಸಿರಿವಂತ್ರೆಲ್ಲಾ ಬಂಗ್ಲೆ ಕಟ್ಸೋರೆ
ಸತ್ಯನ ಹಟ್ಟಿಂದ ಆಚ್ಗೆ ಹಾಕಿ
ಸುಳ್ಳಿಗೆ ಮನಿ ಒಳ್ಗೆ ಜಾಗ ಕೊಟ್ಟೋರೆ
ಕಾಸನ್ನೇ ತಿನ್ಕೊಂಡು..
ಉಣ್ಣೋ ಅನ್ನಕ್ಕೆ ಕಲಬೆರ್ಕೆ ಮಾಡ್ಕೊಂಡು
ಉಸಾರುತಪ್ಪಿ ಹಾಸ್ಗೆ ಹಿಡಿದ್ರು
ದುರಾಸೆನ ಮಾತ್ರ ಬುಡಂಗಿಲ್ಲ ಅಂತಾರೆ
ಭೂಲೋಕದ್ ನರ್ಕ ನೋಡಿ
ಯಮರಾಜ ನಗ್ತಾ ಕುಂತವ್ನೆ
ಹುಟ್ಸಿದ ಸಿವ ನೋಡು
ಕಾಣ್ದಂಗೆ ಕಣ್ಮುಚ್ಕಂಡು
ಧ್ಯಾನ ಮಾಡ್ತಾವ್ನೇ
ಅನ್ಯಾಯ ನೋಡದಾಂಗೆ
ಧರ್ಮದ್ಯಾವ್ತೆ ಕಣ್ಗೆ ಬಟ್ಟೆ
ಕಟ್ಕೊಂಡು ಆರಾಮ್ವಾಗೇ ನಿಂತೋಳೆ.
ಆದ್ರೂನೂ ಮನ್ಸಲ್ಲೇ ಕೊರಗ್ತಾವ್ಳೇ...
"ಈ ಪರ್ಪಂಚ ಒಳ್ಳೇದೇ"
ಜನ ಯಾಕಿಂಗ್ಹೆ ಅಂತ.....!!
No comments:
Post a Comment